ಪಿರಿಯಾಪಟ್ಟಣ :ಆಟೋ ರಿಕ್ಷಾದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಚಾಲಕ ಸೇರಿದಂತೆ ಆಟೋ ರಿಕ್ಷಾ ಜಖಂಗೊಂಡಿರುವ ಘಟನೆ ನಾರಳಾಪುರ ಗ್ರಾಮದ ಬಳಿ ನೆಡೆದಿದೆ.
ತಾಲೂಕಿನ ಕೋಗಿಲವಾಡಿ ಗ್ರಾಮದ ನಿವಾಸಿ ಗಿರೀಶ್ (38) ಜಖಂಗೊಂಡ ವ್ಯಕ್ತಿ. ಕೃಷಿ ಚಟುವಟಿಕೆಗಾಗಿ ಪ್ರತಿನಿತ್ಯ ಕೆಲಸಕ್ಕಾಗಿ ಕೂಲಿ ಕಾರ್ಮಿರಕನ್ನು ಕರೆದುಕೊಂಡು ಬರುತ್ತಿದ್ದ ಗಿರೀಶ್,ಸೋಮವಾರ ಬೆಳಿಗ್ಗೆ 8:30ರ ವೇಳೆ ಎಂದಿನಂತೆ ಕೂಲಿ ಆಳುಗಳನ್ನು ಕರೆತರಲು ಹೋದಾಗ ಈ ಘಟನೆ ಸಂಭವಿಸಿದೆ. ಈ ವೇಳೆ ಗಿರೀಶ್ ರವರ ಎಡ ಗಾಲಿನ ತೊಡೆಯ ಭಾಗಕ್ಕೆ ಪೆಟ್ಟುಬಿದ್ದು ಮೂಳೆ ಮುರಿದಿದ್ದು,ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ದರು ಸಹ.ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗೆ ರವಾನಿಸಲಾಗಿದೆ.ಈ ಸಂದರ್ಭದಲ್ಲಿ ವಿಷಯ ತಿಳಿದ 112 ಇ.ಆರ್.ಎಸ್.ಎಸ್ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡರು.
ಸ್ಥಳೀಯರ ಆಕ್ರೋಶ: ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಕಾಡಂಚಿನ ಪ್ರದೇಶದಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳು ಬೀಳುತಿದ್ದರು ಸಹ ಅರಣ್ಯ ಅಧಿಕಾರಿಗಳು ಇತ್ತಕಡೆ ತಲೆ ಹಾಕದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.